ಭಾರತದ ಸರ್ವೋಚ್ಚನಾಯಕ, ಭಾರತದ ಗಣತಂತ್ರದ ಅಧ್ಯಕ್ಷರ ನಿವಾಸ ಸ್ಥಾನಕ್ಕೆ ರಾಷ್ಟ್ರಪತಿಭವನವೆಂದು ಕರೆಯಲಾಗುತ್ತದೆ. ಇಲ್ಲಿ ನಮ್ಮ ದೇಶದ ೩ ಸೇನಾಪಡೆಗಳ ದಂಡನಾಯಕರಾದ ರಾಷ್ಟ್ರಪತಿಯವರು ವಾಸಿಸುತ್ತಾರೆ. ಈ ಮಹಾಕಟ್ಟಡವನ್ನು ಅಂದಿನ ಬ್ರಿಟಿಷ್ ಸಾಮ್ರಾಜ್ಯದ ಗವರ್ನರ್ ಜನರಲ್ ಆಫ್ ಬ್ರಿಟಿಷ್ ಇಂಡಿಯದ ನಿವಾಸಸ್ಥಾನವನ್ನಾಗಿ ನಿರ್ಮಿಸಲಾಗಿತ್ತು. ನಾವು ಸ್ವಾತಂತ್ರ್ಯವನ್ನು ಗಳಿಸಿಕೊಂಡ ಬಳಿಕ, ಕೊನೆಯ ಗವರ್ನರ್ ಜನರಲ್ ಎಂದೇ ಸಂಬೋಧಿಸಲಾಗುತ್ತಿದ್ದ ಪದವಿಯಲ್ಲಿ ಈ ಭಾರಿ ಬಂಗಲೆಯಲ್ಲಿ ತಂಗಿದ ಶ್ರೇಯಸ್ಸು, ಶ್ರೀ ಚಕ್ರವರ್ತಿ ರಾಜಗೊಪಾಲಾಚಾರ್ಯ ರಿಗೆ ಸಲ್ಲುತ್ತದೆ. (ನಿಜವಾಗಿ ಹೇಳುವುದಾದರೆ ಒಮ್ಮೆ ನಾವು ರಾಷ್ಟ್ರಪತಿ ಭವನವೆಂದು ಹೇಳಿದರೆ, ಒಟ್ಟಾರೆ ೩೪೦ ಕೊಠಡಿಗಳನ್ನು ಉಳ್ಳ, ಪ್ರಮುಖ ಕಟ್ಟಡದ ಬಗ್ಗೆ ಹೇಳಿದಂತಾಗುವುದು)ಅಥವಾ, ಈ ಬಂಗಲೆಯಲ್ಲಿ ರಾಷ್ಟ್ರಪತಿಯವರು ವಾಸಿಸುವ ಒಂದು ಬಂಗಲೆಯ ಬಗ್ಗೆ ಹೇಳಿದಂತಾಗುತ್ತದೆ. ಅದೂ ಅಲ್ಲದೆ ಒಟ್ಟಾರೆ ೧೩೦ ಹೆಕ್ಟೇರ್ (೩೨೦ ಎಕರೆ) ಪ್ರೆಸಿಡೆಂಟ್ ರವರ ಆಡಳಿತಕ್ಕೆ ಅವರ ಘನತೆಗೆ ತಕ್ಕಹಾಗೆ ನಿರ್ಮಿಸಿದ ಭಾರಿ ಪ್ರಮಾಣದ ಸುಸಜ್ಜಿತ ಹಾಲ್‌ಗಳು, ಅತಿಥಿಗೃಹಗಳು, ಆಫೀಸ್ ರೂಂಗಳು, ಮತ್ತು ಭಾರಿ ಪ್ರಮಾಣದ ಅತ್ಯಂತ ವಿಶೇಷ ರೀತಿಯಲ್ಲಿ ನಿರ್ಮಿಸಿದ ಮುಘಲ್ ಗಾರ್ಡನ್ಸ್ ಇರಬಹುದು. ಇದಲ್ಲದೆ ಹಾಗೇ ವಿಹಾರಕ್ಕಾಗಿ ಬಿಟ್ಟಿರುವ ಮೈದಾನಗಳು, ಮತ್ತು ಅವರ ಸಿಬ್ಬಂದಿವರ್ಗದವರಾದ ಅಂಗರಕ್ಷಕರು, ಮತ್ತಿತರ ವರ್ಗದವರ ಮನೆಗಳು, ಕುದುರೆ ಲಾಯಗಳು, ಇತರೆ ಕಾರ್ಯಾಲಯಗಳು, ಎಲ್ಲವೂ ಭವನದ ಒಳಗೇ ಸೇರಿಕೊಂಡಿವೆ. == ಅತಿ ವಿಸ್ತಾರವಾದ ಭವನ == ಈ ನಮ್ಮ ರಾಷ್ತ್ರಪತಿಯವರ ಭವ್ಯ ಭವನವನ್ನು ಅಮೆರಿಕದ ಅಧ್ಯಕ್ಷರ ನಿವಾಸ ಸ್ಥಾನ, 'ವೈಟ್ ಹೌಸ್' ಭವನಕ್ಕೆ ಹೋಲಿಸಿದರೆ, ಅದರ ವಿಸ್ತಾರ ಕೇವಲ, ೧೮ ಎಕರೆಗಳು ಮಾತ್ರ. ಈ ವಿಸ್ತೀರ್ಣದಲ್ಲೇ ಹುಲ್ಲುಗಾವಲುಗಳು, ತೋಟ, ಮತ್ತು ಹಾಗೆ ವಿಹಾರಕ್ಕಾಗಿ ಬಿಟ್ಟ ಬಯಲು ಮೈದಾನಗಳೂ ಸೇರಿವೆ. == ಇತಿಹಾಸ == ೨೦ ನೆಯ ಶತಮಾನದ ಆರಂಭದಲ್ಲೇ ಅಂದಿನ ಕಲ್ಕತ್ತಾನಗರದಿಂದ, ದೆಹಲಿಗೆ ರಾಜಧಾನಿಯನ್ನು ಸ್ಥಾನಾಂತರಗೊಳಿಸುವ ಭಾರಿ ಯೋಜನೆ, ಬ್ರಿಟಿಷ್ ಸಾಮ್ರಾಜ್ಯದ ಮನಸ್ಸಿನಲ್ಲಿ ಬೇರುಬಿಟ್ಟಿತ್ತು. ಹಳೇ ದೆಹಲಿಯ ಹತ್ತಿರದಲ್ಲಿಯೇ ಹೊಸದೆಹಲಿಯನ್ನು ಕಟ್ಟುವ ಬೃಹದ್ ಯೋಜನೆಯ 'ನೀಲನಕ್ಷೆ' ಸಿದ್ಧವಾಗಿತ್ತು. ಈ ಭವವನ್ನು ನಿರ್ಮಿಸಲು ಬಹುದೊಡ್ಡ ಯೋಜನೆಯನ್ನು ಅಂದಿನ ಬ್ರಿಟಿಷ್ ಸರಕಾರ ಹಮ್ಮಿಕೊಂಡಿತ್ತು. ಭಾರತದೇಶದ ಸರ್ವೋಚ್ಚನಾಯಕ, ಗವರ್ನರ್ ಜನರಲ್ ವಾಸಿಸುವ ಭವನ ಅತ್ಯಂತ ಸುಸಜ್ಜಿತವಾಗಿ ಸುಂದರವಾಗಿ ಮತ್ತು ಮಾದರಿಯಾಗಿ ಇರಬೇಕೆಂದ ಆಶಯದೊಂದಿಗೆ ಬಹಳ ಎಚ್ಚರಿಕೆಯಿಂದ ಸುಮಾರು ೪,೦೦೦ ಎಕರೆ ಜಮೀನಿನಲ್ಲಿ ಸೆಂಟ್ರೆಲ್ ಸೆಕ್ರೆಟೇರಿಯೆಟ್ ಭವನ,ಗಳನ್ನು ನಿರ್ಮಿಸುವ ಏರ್ಪಾಡಾಯಿತು. ಸನ್. ೧೯೧೧ ಮತ್ತು ೧೯೧೬ ರ ಮಧ್ಯೆ, ನಿರ್ಮಾಣಕಾರ್ಯ ಆರಂಭಗೊಂಡಿತು. 'ರೈಸಿನಾ' ಮತ್ತು ಮಾಲ್ಚಾ' ಗ್ರಾಮಗಳು, ಮೊದಲೇ ಆ ಜಾಗದಲ್ಲಿ ಮೊದಲಿನಿಂದಲೂ ಇದ್ದವು. '೧೮೯೪ ಲ್ಯಾಂಡ್ ಅಕ್ವಿಸಿಶನ್ ಆಕ್ಟ್ ಪ್ರಕಾರ', ಆ ಗ್ರಾಮಗಳ ಸುಮಾರು ೩೦೦ ಪರಿವಾರಗಳ ನಿವಾಸಿಗಳಿಗೆ ದೆಹಲಿಯ ಬೇರೆ ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಲು ಹೊಸ ಜಾಗಗಳನ್ನು ವಿತರಿಸಲಾಯಿತು...